ಗುರುವಾರ, ಮಾರ್ಚ್ 29, 2018

ಜನರಲ್ ಕೆ. ಎಸ್. ತಿಮ್ಮಯ್ಯ ( ವ್ಯಕ್ತಿ ವಿಶೇಷ )

=====================
ಭಾರತದ ಸೈನ್ಯಕ್ಕೆ ಅಪ್ರತಿಮ ಧೀರರನ್ನು ಕೊಟ್ಟ ನಾಡು ನಮ್ಮ ಕರ್ನಾಟಕದ ಕೊಡಗು.   ಈ ಮಹಾನ್ ಕೊಡುಗೆಯಲ್ಲಿ ಪ್ರಜ್ವಲಿಸಿದ ಪ್ರಮುಖ ತಾರೆಗಳಲ್ಲಿ ಜನರಲ್ ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರೂ ಪ್ರಮುಖರು.  ಜನರಲ್ ತಿಮ್ಮಯ್ಯನವರು  1957ರಿಂದ 1961ರವರೆಗೆ ಭಾರತದ ಭೂಸೇನಾ  ದಂಡನಾಯಕರಾಗಿದ್ದರು. ಹಿಂದೆ ಕೊರಿಯಾ ದೇಶದ ಯುದ್ಧಾನಂತರ ಸಂಯುಕ್ತ ರಾಷ್ಟ್ರಗಳ ಒಂದು ದಳಕ್ಕೆ ಅಧಿಪತಿಯಾಗಿದ್ದ ತಿಮ್ಮಯ್ಯನವರು ಯುದ್ಧ ಖೈದಿಗಳ ಸ್ವದೇಶದಲ್ಲಿ, ಅವರುಗಳಿಗೆ ಪುನರ್ವಸತಿಯನ್ನು ಸ್ಥಾಪಿಸುವದರ ಹೊಣೆ ಹೊತ್ತಿದ್ದರು. ಭಾರತೀಯ ಸೇನೆಯಿಂದ ನಿವೃತ್ತರಾದ ಬಳಿಕ ಸಂಯುಕ್ತ ರಾಷ್ಟ್ರಗಳ ಶಾಂತಿ-ಸ್ಥಾಪಕ ಸೈನ್ಯದ ಮುಖ್ಯಸ್ಥರಾಗಿ ಸೈಪ್ರಸ್‌ನಲ್ಲಿದ್ದರು.  ಹೀಗೆ ತಿಮ್ಮಯ್ಯನವರ ಸಾಧನೆಗಳು ವೈವಿಧ್ಯಪೂರ್ಣವಾದದ್ದು. 

ಕೊಡಂದೆರ ಸುಬ್ಬಯ್ಯ ತಿಮ್ಮಯ್ಯನವರು 30 ಮಾರ್ಚ್ 1906ರಲ್ಲಿ ಕೊಡಗಿನ ಮಡಿಕೇರಿಯಲ್ಲಿ ಜನಿಸಿದರು. ಅವರ ತಂದೆಯ ಹೆಸರು ತಿಮ್ಮಯ್ಯ ಹಾಗೂ ತಾಯಿಯ ಹೆಸರು ಸೀತವ್ವ. ಅವರ ನಾಮಕರಣದ ಮುಹೂರ್ತದಲ್ಲಿಟ್ಟ ಹೆಸರು ಸುಬ್ಬಯ್ಯ. ಆದರೆ ಆಂಗ್ಲರ ಕಾಲದ ಆಂಗ್ಲೀಯ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೆರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ ಎಸ್ ತಿಮ್ಮಯ್ಯ ಎಂದು ಪ್ರಸಿದ್ಧರಾದರು. ಕೊಡಂದೆರ ಎನ್ನುವದು ಅವರ ಮನೆತನದ ಹೆಸರು.ಅವರ ತಂದೆ ಆಗರ್ಭ ಶ್ರೀಮಂತ ಪ್ಲಾಂಟರ್ ಆಗಿದ್ದರು.

ಉತ್ತಮ ಶಿಕ್ಷಣವನ್ನು ಕೊಡಿಸಬೇಕೆಂಬ ಉದ್ದೇಶದಿಂದ ಅವರ ಮಾತಾಪಿತರು ಅವರನ್ನು ಕೂನೂರಿನ ಸೈಂಟ್ ಜೋಸೆಫ್’ಸ್ ಕಾನ್ವೆಂಟ್‌ನಲ್ಲಿ ಸೇರಿಸಿದರು. ಆಗ ಅವರ ವಯಸ್ಸು ಎಂಟು. ಈ ಶಾಲೆಯನ್ನು ಅಯರ್ಲೆಂಡಿನ ಇಬ್ಬರು ಸೋದರರು ನಡೆಸುತ್ತಿದ್ದರು. ಬಳಿಕ ಅವರು ಬೆಂಗಳೂರಿನ ಬಿಶಪ್ ಕಾಟನ್ ಬಾಲಕರ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಶಾಲಾ ವಿದ್ಯಾರ್ಜನೆಯ ನಂತರ ಈಗಿನ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಎನಿಸಿರುವ ಡೆಹ್ರಾಡೂನಿನಲ್ಲಿರುವ  ‘ಪ್ರಿನ್ಸ್ ಆಫ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟ್ರಿ ಕಾಲೆಜ್’ನ್ನು ಸೇರಿದರು. ಈ ಕಾಲೇಜಿನಿಂದ ಪದವೀಧರರಾದ ಬಳಿಕ ಬ್ರಿಟನ್ನಿನ ರಾಯಲ್ ಮಿಲಿಟ್ರಿ ಅಕ್ಯಾಡೆಮಿ ಅಭ್ಯರ್ಥಿಗಳಾಗಿ  ಆಯ್ಕೆಯಾದ ಕೇವಲ ಆರು ಮಂದಿ ಭಾರತೀಯರಲ್ಲಿ ಒಬ್ಬರಾಗಿ ತರಬೇತಿಯನ್ನು ಪಡೆದರು. 1935ರಲ್ಲಿ ತಿಮ್ಮಯ್ಯನವರು ನೈನಾ ಕಾರ್ಯಪ್ಪನವರನ್ನು ವಿವಾಹವಾದರು. ಆ ಸಮಯದಲ್ಲಿ ಈಗ ಪಾಕಿಸ್ಥಾನದ ಭಾಗವಾಗಿರುವ  ಕ್ವೆಟ್ಟಾ ತಿಮ್ಮಯ್ಯನವರ ಕಾರ್ಯಕ್ಷೇತ್ರವಾಗಿತ್ತು.   ಅದೇ ವರ್ಷ ಅಲ್ಲಿ ನಡೆದ ಭೂಕಂಪದ ಮರುದಿನಗಳಲ್ಲಿ ಈ ನವದಂಪತಿಗಳು ಮಾಡಿದ ಸೇವೆ ಸ್ಮರಣೀಯವೆನಿಸಿವೆ.

ಬ್ರಿಟಿಷರ ಆಳ್ವಿಕೆಯಲ್ಲಿ ಲೆಫ್ಟಿನೆಂಟ್ ಗೌರವದೊಂದಿಗೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ತಿಮ್ಮಯ್ಯನವರು ಹಲವಾರು ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು.  ಇವುಗಳಲ್ಲಿ ಅಂದಿನ ಭಾರತದ ಭಾಗವಾಗಿದ್ದ ಪಾಕಿಸ್ಥಾನದ ಪ್ರದೇಶಗಳಲ್ಲಿ ಬಂಡುಕೋರ ಪಠಾಣ್ ಪಂಗಡಗಳ ವಿರುದ್ಧದ ಕಾರ್ಯಾಚರಣೆ ಪ್ರಮುಖವಾದದ್ದು.   ಫೆಬ್ರವರಿ 1935ರಲ್ಲಿ ಅವರು ಕ್ಯಾಪ್ಟನ್ ಎನಿಸಿದ್ದರು.  ಚನ್ನೈನಲ್ಲಿರುವ ಸೇನಾ ತರಬೇತಿ ಕೇಂದ್ರದಲ್ಲಿ ನವತರುಣರಿಗೆ ಬೋಧಕರಾಗಿಯೂ ಕೆಲಸ ಮಾಡಿದರು. 

1947ರಲ್ಲಿ ಭಾರತವು ಸ್ವತಂತ್ರಗೊಳ್ಳುವ ಸನ್ನಾಹದಲ್ಲಿದ್ದುದರಿಂದ ತಿಮ್ಮಯ್ಯನವರನ್ನು ಫಿಲಿಪೈನ್ಸ್‌ನಿಂದ ವಾಪಸ್ ಕರೆದುಕೊಳ್ಳಲಾಯಿತು. ಭಾರತದ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಈ ಕರ್ತವ್ಯದ ಬಳಿಕ ಸೆಪ್ಟೆಂಬರ್ 1947ರಲ್ಲಿ ಅವರಿಗೆ ಮೇಜರ್-ಜನರಲ್ ಆಗಿ ಬಡ್ತಿ ನೀಡಲಾಯಿತು. 4ನೇ ಇನ್ಫಂಟ್ರಿ ವಿಭಾಗದ ದಳಪತಿಗಳಾಗಿ ಅವರಿಗೆ  ಹೆಚ್ಚುವರಿ ಅಧಿಕಾರವಿತ್ತು, ಭಾರತ ಮತ್ತು ಪಾಕಿಸ್ತಾನಗಳ ನಡುವೆ ಪರಸ್ಪರ ವಲಸೆ ಹೋಗುವದನ್ನು ನಿಯಂತ್ರಿಸಲು ಪಂಜಾಬ್ ಗಡಿ ಸೇನೆಯ ಮುಖ್ಯಾಧಿಕಾರವನ್ನು ವಹಿಸಿಕೊಳ್ಳುವ ಆದೇಶ ನೀಡಲಾಯಿತು. ಮತೀಯ ಗಲಭೆಗಳಿಂದ ಹೊತ್ತಿ ಉರಿಯುತ್ತಿದ್ದ ಭಾರತ-ಪಾಕಿಸ್ತಾನದ ಗಡಿಯ ಸುತ್ತುಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದು ಕೋಟಿ ಜನರ ರಕ್ಷಣೆಯ ಭಾರ ಅವರ ಮೇಲಿತ್ತು. ಆ ರಣರಂಗದಲ್ಲಿ ಅವರ ವೈಯಕ್ತಿಕ ಪ್ರವೇಶದಿಂದ ಸಾವಿರಾರು ಮಂದಿ ಹಿಂದೂಗಳನ್ನೂ ಸಿಖ್ಖರನ್ನೂ ಕಾಪಾಡಿ ಅವರೆಲ್ಲರ ನೆಚ್ಚಿನ ಧೀರೋದಾತ್ತ ನಾಯಕನೆನ್ನಿಸಿಕೊಂಡರು.

ಇದಾದ ನಂತರ ಜಮ್ಮು-ಕಾಶ್ಮೀರದಲ್ಲಿದ್ದ 19ನೇ ಇನ್ಫಂಟ್ರಿ ವಿಭಾಗದ ಆಧಿಪತ್ಯದಲ್ಲಿ ಅವರು ಕಾಶ್ಮೀರವನ್ನು ಆಕ್ರಮಿಸಲೆತ್ನಿಸುತ್ತಿದ್ದ ಪಾಕಿಸ್ತಾನದ ಸೇನೆಯನ್ನು ತಡೆಹಿಡಿದು ಹಿಮ್ಮೆಟ್ಟಿಸುವದರಲ್ಲಿ ಜಯಶೀಲರಾದರು. 1948ರ ನವೆಂಬರ್‌ನಲ್ಲಿ ತಾವೇ ಮುಂಚೂಣಿಯಲ್ಲಿದ್ದು 12000 ಅಡಿ ಎತ್ತರದಲ್ಲಿರುವ ಜೊಜಿಲಾ ಕಣಿವೆಯ ಮೇಲೆ ಹಠಾತ್ ಧಾಳಿ ನಡೆಸಿ ಪಾಕಿಸ್ತಾನಿ ಸೈನ್ಯವನ್ನು ಅಲ್ಲಿಂದ ಕಾಲ್ತೆಗೆಯುವಂತೆ ಮಾಡಿ ದ್ರಾಸ್, ಕಾರ್ಗಿಲ್ ಮತ್ತು ಲೇಹ್ ಪ್ರದೇಶಗಳನ್ನು ಕೈವಶಮಾಡಿಕೊಂಡರು. 10000 ಅಡಿಗಿಂತಲೂ ಎತ್ತರದ ಪ್ರದೇಶದಲ್ಲಿ ಜಗತ್ತಿನ ಯಾವದೇ ಸೈನ್ಯವು ಟ್ಯಾಂಕನ್ನು ಯುದ್ಧ ಕಾರ್ಯಾಚರಣೆಯಲ್ಲಿ ಬಳಸಿದುದು ಅದೇ ಪ್ರಪ್ರಥಮವೆಂದು ದಾಖಲಾಗಿದೆ. ತಿಮ್ಮಯ್ಯನವರು ಅಂದಿನ ಪ್ರಧಾನಿ ನೆಹ್ರೂರವರನ್ನು ಮೂರು ತಿಂಗಳ ಅವಧಿಯಿತ್ತರೆ ಅತಿಕ್ರಮಣಕಾರರನ್ನು ಮುಜಾಫರಬಾದ್‌ವರೆಗೆ ಅಟ್ಟುವುದಾಗಿ ಕೇಳಿಕೊಂಡರೂ, ಒಪ್ಪದೇ ಹೋಗಿ ಅಕಾಲಿಕ ಶಾಂತಿಸಂಧಾನ ಉಂಟಾದುದರಿಂದಾಗಿ ಕಾಶ್ಮೀರ ಸಮಸ್ಯೆಯನ್ನು ಇಂದಿನವರೆವಿಗೂ ಬಗೆಹರಿಸದೇ ಉಳಿಸಿರುವದು ಇತಿಹಾಸವೆನಿಸಿದೆ.

1953ರಲ್ಲಿ ಕೊರಿಯಾದಲ್ಲಿ ತಟಸ್ಥ ರಾಷ್ಟ್ರಗಳ ಸ್ವದೇಶ-ಪುನರ್ವಸತಿ ಸಮಿತಿಯ (Neutral Nations Repatriation Commission) ಸಭಾಧ್ಯಕ್ಷರನ್ನಾಗಿ ಸಂಯುಕ್ತ ರಾಷ್ಟ್ರಗಳು ಜನರಲ್ ಕೆ ಎಸ್ ತಿಮ್ಮಯ್ಯನವರನ್ನು ಆಯ್ಕೆ ಮಾಡಿದವು. ಕಮ್ಯುನಿಸ್ಟ್ ಮತ್ತು ಪಶ್ಚಿಮ ದೇಶಗಳೊಡನೆ ನಿಷ್ಪಕ್ಷಪಾತದಿಂದ ವ್ಯವಹರಿಸಿ ತಿಮ್ಮಯ್ಯನವರು ಎಲ್ಲರ ಮೆಚ್ಚುಗೆಯನ್ನು ಪಡೆದರು. ಈ ಸಂದರ್ಭದಲ್ಲಿ ಅವರಿಗೆ ಲೆಫ್ಟಿನಂಟ್-ಜನರಲ್ ಪದವಿಯನ್ನೀಯಲಾಯಿತು. ಭಾರತ ಸರಕಾರವು ಅವರನ್ನು ಪದ್ಮವಿಭೂಷಣವನ್ನಿತ್ತು ಗೌರವಿಸಿತು.

7ನೇ ಮೇ 1957ರಂದು ತಿಮ್ಮಯ್ಯನವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. 1959ರಲ್ಲೇ ಭಾರತ-ಚೀನಾ ಯುದ್ಧದ ಮುನ್ಸೂಚನೆಯಿದ್ದು, ಅದಕ್ಕೆ ಭಾರತೀಯ ಸೈನ್ಯವನ್ನು ಸಜ್ಜುಗೊಳಿಸಬೇಕೆಂಬ ತಿಮ್ಮಯ್ಯನವರ ಸಲಹೆಯನ್ನು ಆಗಿನ ರಕ್ಷಣಾ ಮಂತ್ರಿ ವಿ ಕೆ ಕೃಷ್ಣ ಮೆನೊನ್ ತಳ್ಳಿಹಾಕಿದ್ದರಿಂದ ಅದನ್ನು ಪ್ರತಿಭಟಿಸಿ ತಿಮ್ಮಯ್ಯನವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗಿತ್ತರು. ನೆಹರೂ ಅವರು  ತಿಮ್ಮಯ್ಯನವರ ಮನವೊಲಿಸಿ ರಾಜೀನಾಮೆಯನ್ನು ಹಿಂತೆಗೆಕೊಳ್ಳುವಂತೆ ಮಾಡಿದರು. ಆದರೆ ಅವರ ಸಲಹೆ-ಸೂಚನೆಗಳನ್ನು ಕಾರ್ಯಗತ ಮಾಡಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. 7ನೇ ಮೇ 1961ರಲ್ಲಿ ತಿಮ್ಮಯ್ಯನವರು ನಿವೃತ್ತರಾದರು. 35ವರ್ಷಗಳ ಅವರ ಸೈನ್ಯದ ಸೇವೆ ಅಲ್ಲಿಗೆ ಮುಗಿಯಿತು.

ಭಾರತೀಯ ಸೈನ್ಯದಿಂದ ನಿವೃತ್ತರಾದ ಮೇಲೆ, ಸಂಯುಕ್ತ ರಾಷ್ಟ್ರಗಳು ಅವರ ಸೇವೆಯನ್ನು ಬಯಸಿ ಸೈಪ್ರಸ್‌ನಲ್ಲಿ ಸಂಯುಕ್ತ ರಾಷ್ಟ್ರಗಳ ಸೇನೆಯ ಆಧಿಪತ್ಯವನ್ನು ಜುಲೈ 1964ರಲ್ಲಿ ನೀಡಿದರು. ಅಲ್ಲಿನ ಅತ್ಯಂತ ವಿಸ್ಪೋಟಕ ಪರಿಸ್ಥಿತಿಯನ್ನು ಸೂಕ್ತವಾಗಿ ಬಗೆಹರಿಸಿದ್ದಕ್ಕೆ ತುರ್ಕಿಯ ವಿದೇಶಾಂಗ ಸಚಿವರು, ‘ಅವರ ಬೌದ್ಧಿಕ ಪ್ರಾಮಾಣಿಕತೆ ಮತ್ತು ಅಚಲ ನಿಷ್ಪಕ್ಷಪಾತದಿಂದ ಶಾಂತಿಯನ್ನು ಸ್ಥಾಪಿಸಿದ ಶ್ರೇಷ್ಠ ಪ್ರಯತ್ನ’ವನ್ನು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದರು. ಗ್ರೀಕ್ ಸರ್ಕಾರವು ಅವರ ‘ಚಾರಿತ್ರ್ಯ ಬಲ, ವಾಸ್ತವವಾದಿತ್ವ ಮತ್ತು ನ್ಯಾಯಪ್ರಜ್ಞೆ’ಯನ್ನು ಕೊಂಡಾಡಿ ಗೌರವಿಸಿತ್ತು..

ಸೈಪ್ರಸ್ನಲ್ಲಿ ಸೇವೆಯಲ್ಲಿರುವಾಗಲೇ ಅಲ್ಲಿ ಅವರು 18ನೇ ಡಿಸೆಂಬರ್ 1965ರಂದು ನಿಧನರಾದರು. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತಂದು, ಬೆಂಗಳೂರಿನಲ್ಲಿ  ಸಂಸ್ಕಾರ ಮಾಡಲಾಯಿತು.  ಸೈಪ್ರಸ್ ದೇಶವು ತನ್ನ ನೆಲದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ವೀರನ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತಲ್ಲದೆ, ಅವರು ವಾಸಿಸುತ್ತಿದ್ದ ನಿಕೋಸಿಯಾದ ಒಂದು ಮಾರ್ಗಕ್ಕೆ ಅವರ ಹೆಸರನ್ನಿಟ್ಟಿತು.

ಆಗ್ರಾ ಪಟ್ಟಣವು ತನ್ನ ಒಂದು ಮುಖ್ಯ ರಸ್ತೆಗೆ ಜನರಲ್ ಕೆ ಎಸ್ ತಿಮ್ಮಯ್ಯನವರ  ಹೆಸರನ್ನು  70ರ ದಶಕದ ಆರಂಭದಲ್ಲೇ ಇಟ್ಟು ಗೌರವಿಸಿತು.

ಬೆಂಗಳೂರಿನ ಶಿವಾಜಿನಗರದ ದಂಡು ಪ್ರದೇಶದಲ್ಲಿ ಒಂದು ರಸ್ತೆಗೆ ಅವರ ಹೆಸರನ್ನಿಟ್ಟಿದ್ದು, ಇತ್ತೀಚೆಗೆ ರಿಚ್ಮಂಡ್ ವೃತ್ತದಿಂದ ಹಳೆಯ ವಿಮಾನ ನಿಲ್ದಾಣದವರೆಗಿರುವ ರಿಚ್ಮಂಡ್ ರಸ್ತೆಯನ್ನು ಜನರಲ್ ತಿಮ್ಮಯ್ಯ ರಸ್ತೆಯೆಂದು ಮರುಹೆಸರನ್ನಿಡಲಾಗಿದೆ. ಅವರ ಹುಟ್ಟೂರಾದ ಮಡಿಕೇರಿಯಲ್ಲಿ ಮಂಗಳೂರಿನಿಂದ ಮತ್ತು ವಿರಾಜಪೇಟೆಯಿಂದ ಬಂದು ಮಡಿಕೇರಿಯನ್ನು ಸೇರುವಲ್ಲಿ ಆಳೆತ್ತರದ ವಿಗ್ರಹವನ್ನು ಸ್ಥಾಪಿಸಲಾಗಿದೆ.  ಈ ಮಹಾನ್ ಯೋಧರ ಕೊಡುಗೆ ಹಾಗೂ ಅದಕ್ಕಾಗಿ ದೇಶ ಅವರ ಬಗ್ಗೆ ಹೊಂದಿರುವ ಗೌರವಗಳು ಇವೆಲ್ಲವುಗಳಿಗಿಂತ  ಹಿರಿದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ